Wednesday, April 17, 2024

ಇದು ರಾಮ ಮಂದಿರ ನೀ ರಾಮಚಂದಿರ!!!!

ಒಂದು  ಸಾವಿರದ ಐನೂರು ಇಸವಿಯ ಆಸುಪಾಸು.. 

ಒಂದು ಸದ್ ಕುಟುಂಬದಲ್ಲಿ ಭೀಕರ ಚರ್ಚೆ ನೆಡೆಯುತ್ತಿತ್ತು.. ಆ ಚರ್ಚೆಗೆ ಮುಖ್ಯ ಕಾರಣ.. ಪ್ರಭು ಶ್ರೀ ರಾಮ ಚಂದ್ರನ ಹುಟ್ಟಿದ ಭೂಮಿ ಎನ್ನಲಾದ.. ಶ್ರೀ ರಾಮಚಂದ್ರ ಪುಟ್ಟ ಮಗುವಿನ ಮೂರ್ತಿ ಇತ್ತು ಎನ್ನಲಾದ ದೇವಾಲಯವನ್ನು ಕೆಡವಿ ಅಲ್ಲಿ ಬೇರೆ ಧರ್ಮದ ಕಟ್ಟಡ ಎದ್ದು ನಿಂತಿದೆ ಎನ್ನುವುದು. 

"ಅಮ್ಮ ಸದಾ ರಾಮ ರಾಮ ಎನ್ನುತ್ತಿದ್ದ ಶ್ರೀ ರಾಮ ನೋಡಿದೆಯಾ ಹೇಗೆ ಕೈ ಕೊಟ್ಟು ಬಿಟ್ಟ.. ಇದು ರಾಮ ಮಂದಿರ ನೀ ರಾಮಚಂದಿರ ಎನ್ನುತ್ತಾ ಹಾಡುತ್ತಿದ್ದ ಕೋಟ್ಯಂತರ ಮಂದಿಗೆ ಎಂಥಹ ಆಘಾತ ಕೊಟ್ಟು ಬಿಟ್ಟ ನಿನ್ನ ಶ್ರೀ ರಾಮ.. ನೋಡಿದೆಯಾ?" ಎನ್ನುತ್ತಾ ಮಮ್ಮಲ ಮರುಗುತಿದ್ದ ಆ ಮಾತುಗಳನ್ನು ಕೇಳಿದಾಗ ಯಾರಿಗೆ ಆದರೂ ಹೊಟ್ಟೆಯಲ್ಲಿ ಇಲಿ ಓಡಾಡಿದ ಅನುಭವವಾಗುತ್ತಿತ್ತು.. ಅವರ ಮಾತಿನ ಉದ್ದೇಶ.. "ಶ್ರೀ ರಾಮ ಆ ದೇವಾಲಯ ಬೀಳುವಾಗ ತನ್ನನ್ನೇ ತಾನು ರಕ್ಷಣೆ ಮಾಡಿಕೊಳ್ಳಲಿಲ್ಲ ಎನ್ನುವ ಅರ್ಥ ಕೂಡಿತ್ತು.. "

ಹಲವಾರು ಶತಮಾನಗಳ ಕಾಲ ಒಂದು ತಾತ್ಕಾಲಿಕ, ದುಸ್ತರ ಸ್ಥಿತಿಯ ಪುಟ್ಟ ಪೆಟ್ಟಿಗೆಯಂಥ ಗುಡಿಯಲ್ಲಿ ನಿಂತಿದ್ದ ಬಾಲರಾಮನಿಗೆ ಭವ್ಯವಾದ ಒಂದು ಗುಡಿಯನ್ನು ಕಟ್ಟಬೇಕೆಂದು ಆ ಊರಿನ ಭಕ್ತರ ಸಮೂಹ ನಿರ್ಧಾರ ಮಾಡಿತು.. 

ಆ ನಿರ್ಧಾರ ಸುಲಭದ್ದು ಆಗಿರಲಿಲ್ಲ.. ಅನೇಕಾನೇಕ ತೊಡಕುಗಳು, ಹಿಂಸಾಚಾರಗಳು, ಬಲಿದಾನ ಎಲ್ಲವೂ ನೆಡೆದವು.. ಆದರೂ ಮನಸ್ಸು ಕುಗ್ಗಿರಲಿಲ್ಲ, ಧೈರ್ಯ ಹೆಚ್ಚಾಗುತ್ತಲೇ ಇತ್ತು.. 

ಪ್ರಭು ಶ್ರೀರಾಮನ ದರ್ಶನಕ್ಕೆ ಕಾದಿದ್ದ ಶಬರಿಯಂತೆ, ಶ್ರೀರಾಮಚಂದ್ರನ ಪಾದ ಸ್ಪರ್ಶಕ್ಕೆ ಕಾದಿದ್ದ ಅಹಲ್ಯೆಯಂತೆ ಆ ಒಂದು ಕ್ಷಣ ಬಂದೆ ಬಿಟ್ಟಿತು.. ದೇಶದಾದ್ಯಂತ ಶ್ರೀ ರಾಮಚಂದ್ರನಿಗಾಗಿ ಗುಡಿಯನ್ನು ಕಟ್ಟಬೇಕೆಂಬ ಐನೂರು ವರ್ಷಗಳಷ್ಟು ಹಿಂದಿನ ಸಂಕಲ್ಪಕ್ಕೆ ಮತ್ತೆ ಚಾಲನೆ ಸಿಕ್ಕಿತು.. 

ದೇಶದಾದ್ಯಂತ ಅದಕ್ಕೆ ಸಹಿ ಸಂಗ್ರಹ ಅಭಿಯಾನ ಶುರು ಮಾಡಿದರು.. ನನ್ನ ಮನೆಗೂ ಆ ಸಹಿ ಸಂಗ್ರಹ ಮಾಡುವ ಸೇನೆ ಬಂದಾಗ ಸಹಿ ಮಾಡಿ ಕೇಳಿದೆ "ಸಹಿ ಹಾಕುವೆ ಆದರೆ ನಿಜಕ್ಕೂ ಈ ಕಾರ್ಯ ಸಾಧ್ಯವೇ?"  ಸಿಕ್ಕ ಉತ್ತರ "ಮಂದಿರ ಅಲ್ಲೇ‌ ಕಟ್ಟುವೆವು"

ಅದಾಗಿ ದಶಕಗಳೇ ಕಳೆದವು.. ಆ ಸುವರ್ಣ ಸಮಯ ಬಂದೆ ಬಿಟ್ಟಿತು.. ನಮ್ಮ ಕಾಲಘಟ್ಟದಲ್ಲಿ ಈ ಅಭೂತ ಪೂರ್ವ ಘಟನೆಗೆ ನಮ್ಮ ಕಣ್ಣುಗಳು ಸಾಕ್ಷಿಯಾಗಿಯೇ ಬಿಟ್ಟಿತು.. 

ಶ್ರೀ ರಾಮನ ಹೆಜ್ಜೆ ಗುರುತನ್ನು ದಾಖಲಿಸಿದ ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಭೂಮಿ ಪೂಜೆಯನ್ನು ಆಗಸ್ಟ್ ಐದು ಎರಡು ಸಾವಿರದ ಇಪ್ಪತ್ತನೇ ಇಸವಿಯಂದು ನೆರವೇರಿತು.. 

ಈ ಪುಣ್ಯ ಕಾರ್ಯಕ್ಕಾಗಿಯೇ ಹುಟ್ಟಿದ್ದಾರೇನೋ ಅನಿಸುವಂಥಹ ಅದ್ಭುತ ವ್ಯಕ್ತಿತ್ವದ ನಮ್ಮೆಲ್ಲರ ನೆಚ್ಚಿನ ನಾಯಕ ಶ್ರೀ ನರೇಂದ್ರ ಮೋದಿ ಅವರ ಕರಸೇವೆಯಲ್ಲಿ ಈ ಶುಭ ಕಾರ್ಯ ಜರುಗಿತು. 

ನಂತರ ಇಪ್ಪತ್ತೆರಡು ಜನವರಿ ಎರಡು ಸಾವಿರದ ಇಪ್ಪತ್ತನಾಲ್ಕನೇ  ಇಸವಿ ಆ ಭವ್ಯ ಮಂದಿರದಲ್ಲಿ ನಮ್ಮ ಕರುನಾಡಿನ ಜಕ್ಕಣ್ಣಚಾರಿ ಶ್ರೀ ಅರುಣ್ ಯೋಗಿರಾಜ್ ಅವರ ಪುಣ್ಯ ಮಾಡಿದ ಕರಗಳಿಂದ ನಿರ್ಮಿತವಾದ ಬಾಲರಾಮನ ಪ್ರಾಣ ಪ್ರತಿಷ್ಠಾಪನಾ ಕಾರ್ಯ ಹಾಗೂ ದೇವಾಲಯವನ್ನು  ಲೋಕಾರ್ಪಣೆ ಮಾಡಿದ ಅಮೃತಕ್ಷಣಗಳನ್ನು ದೂರದರ್ಶನದಲ್ಲಿ ನೋಡಿ ನಮ್ಮ ಕಣ್ಣುಗಳು ಪಾವನವಾಗಿದ್ದವು.. 

ಕೃಪೆ -ಗೂಗಲೇಶ್ವರ 


ಅಂದು ದೇಶ ವಿದೇಶಗಳಲ್ಲಿ ಈ ಐತಿಹಾಸಿಕ ಕ್ಷಣಗಳನ್ನು ಸಂಭ್ರಮಿಸಿದ್ದು, ಮನೆ ಮನಗಳಲ್ಲಿ ದೀಪ ಬೆಳಗಿದ್ದು, ಇಡೀ ಭುವಿಯೇ ಅಯೋಧ್ಯೆಯ ಕಡೆ ಗಮನ ಹರಿಸಿದ್ದು ವಿಶೇಷವಾಗಿತ್ತು.. 

ಕೃಪೆ -ಗೂಗಲೇಶ್ವರ 

ಈ ಹೆಮ್ಮೆಯ ಕ್ಷಣಗಳನ್ನು ನೋಡುತ್ತಾ ನೋಡುತ್ತಾ ಆನಂದ ಪಡುತ್ತಾ "ಇದು ರಾಮಮಂದಿರ.. ನೀ ರಾಮಚಂದಿರ.. ಜೊತೆಯಾಗಿ ನೀ ಇರಲು ಬಾಳು ಸಹಜ ಸುಂದರ" ಎನ್ನುವ ಹಾಡನ್ನು ಗುನುಗುನಿಸದೆ ಇರಲು ಸಾಧ್ಯವಾಗುತ್ತಲೇ ಇರಲಿಲ್ಲ.. 

ಅಂದು ನಮ್ಮ ಮನೆಯಲ್ಲೂ ಬಾಲರಾಮನ ಪುಟ್ಟ ಸ್ವಾಗತಕ್ಕೆ ಒಂದಷ್ಟು ಸಿದ್ಧತೆಗಳು, ಆಚರಣೆ ನೆಡೆದಿತ್ತು.. ಒಂದು ಸಾರ್ಥಕ ಭಾವದಲ್ಲಿ ಮಲಗಿದ್ದೆ.. 

ಬೆಳಗಿನ ಜಾವ ಸಕ್ಕರೆ ನಿದ್ದೆಯಲ್ಲಿದ್ದೆ "ಶ್ರೀ ಶ್ರೀ" ಯಾರೋ ಕರೆದಂತೆ.. ಯಾರೋ ಬಾಣದಿಂದ ನನ್ನನ್ನು ಮುಟ್ಟಿದಂತೆ ಭಾಸವಾಯಿತು .. 

ಕೃಪೆ -ಗೂಗಲೇಶ್ವರ 

ಅರೆಗಣ್ಣು ತೆರೆದು ನೋಡಿದೆ.. ಒಂದು ಪುಟ್ಟ ಬಾಲಕ .. ಕಷಾಯ ವಸ್ತ್ರಧಾರಿ... ನಗು ನಗುತ್ತ "ಏನು ಶ್ರೀ.. ನನ್ನ ಬಗ್ಗೆ ಮಾತಾಡೋದೇ ಇಲ್ಲ.. ನನ್ನ ಬಗ್ಗೆ ಬರೆಯೋದೇ ಇಲ್ಲ.. ನನಗಿಂತ ನನ್ನ ಮುಂದಿನ ಅವತಾರ ಶ್ರೀ ಕೃಷ್ಣನೇ ನಿನಗೆ ಬಲು ಪ್ರಿಯ ಅಂತ ನೂರಾರು ಕಡೆ ಹೇಳಿದ್ದೆ.. ಇವತ್ತು ನೋಡಿದರೆ ನನ್ನನ್ನು ಸಿಂಗರಿಸಿ, ನನ್ನ ಜೀವನದ ಕೆಲವು ಚಿತ್ರಗಳನ್ನು ಪ್ರದರ್ಶಿಸಿ, ಇದು ಅದ್ಭುತ ಕ್ಷಣಗಳು ಶ್ರೀ ರಾಮಚಂದ್ರಯಾನ ಅಂತೆಲ್ಲ ಬರೆದು.. ದೊಡ್ಡದಾಗಿ ಸಂಭ್ರಮಿಸಿದ್ದೀಯಾ.. ಏನು ಸಮಾಚಾರ"

"ಪ್ರಭು ಶ್ರೀ ರಾಮಚಂದ್ರನೇ .. 
ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ತಂದೆಯು ನೀನು .... ಅಲ್ಲ ಪ್ರಭುವೇ.. ನಿನ್ನ ಶಕ್ತಿ.. ನಿನ್ನ ತಾಳ್ಮೆ.. ನಿನ್ನ ಧೈರ್ಯ, ನಿನ್ನ ಮಮತೆ ಎಲ್ಲಿ ಕಾಣಲು ಸಾಧ್ಯ.. ಬದುಕಿದರೆ ಹೀಗೆ ಬದುಕುಬೇಕು ಎಂದು ರಹದಾರಿ ಹಾಕಿಕೊಟ್ಟ ಮಹಾಮಹಿಮನು ನೀನು.. ಆದರೂ ಶ್ರೀ ಕೃಷ್ಣನ ಮಾತುಗಳು.. ಆ ಕಷ್ಟಗಳನ್ನು ಎದುರಿಸಲು  ಸಲಹೆಗಳು, ಆ ಮಾಯೆ, ಆ ನಗು, ಆ ಹಿತನುಡಿಗಳು, ಸವಾಲುಗಳನ್ನು ನಗು ನಗುತ್ತಲೇ ಸೋಲಿಸುವ ಆ ಗುಣಗಳು ನನಗೆ ಮಾರ್ಗದರ್ಶಿ.. ಮತ್ತು ಸ್ಫೂರ್ತಿ ಹಾಗಾಗಿ ನನಗೆ ನಿನ್ನ ಇನ್ನೊಂದು ಅವತಾರ ಇಷ್ಟೇ.. ಆದ್ರೆ ಪ್ರತಿ ಸಂದರ್ಭದಲ್ಲೂ ರಾಮ ರಾಮ ಅಯ್ಯೋ ರಾಮ.. ಎನ್ನುವ ನನ್ನ ಮನಸ್ಸು ನಿನ್ನ ಬಗ್ಗೆಯೇ ಗುಪ್ತಗಾಮಿನಿಯ ಹಾಗೆ ಹರಿಯುತ್ತಲೇ ಇರುತ್ತದೆ.. ಅದು ನಿನಗೆ ಗೊತ್ತು.. ಕಳ್ಳ ನೀನು ನನ್ನ ಪರೀಕ್ಷೆ ಮಾಡುತ್ತಿದ್ದೆಯ ಅಷ್ಟೇ.. ಮೇಲೆ ಹಾಡಿದ ಹಾಡನ್ನೇ ಇನ್ನೊಮ್ಮೆ ವಿಭಿನ್ನವಾಗಿ ಹಾಡುತ್ತೇನೆ ನೋಡು.. 

ನೀನು ನಾನು ಒಂದೇ ಏನು  
ಹೊನ್ನು ಮಣ್ಣು ಸರಿ ಸಮವೇನು 
ಎಲ್ಲಾ ಬಲ್ಲ ಕಳ್ಳನು ನೀನು 
ನಿನಗೀ ಮಾತು ಸರಿಯೇನು" 


"ನಾನು ನೀನು ನೆಂಟರಯ್ಯ ನಮಗೆ ಭೇದ ಇಲ್ಲವಯ್ಯಾ.. "

"ಅರೆ ಶ್ರೀ ಹಾಡೋಕೆ ಶುರು ಮಾಡಿದೆ.. ನಿಜಕ್ಕೂ ನನಗೆ ಖುಷಿಯಾಗುತ್ತಿದೆ.. ನಾ ಹುಟ್ಟಿ ಬೆಳೆದ ನಾಡಿನಲ್ಲಿ ಮತ್ತೆ ನನಗೊಂದು ನೆಲೆ ಸಿಕ್ಕಿದೆ.. ಇದಕ್ಕಿಂತ ಇನ್ನೇನು ಬೇಕು.. ನೋಡು ಆ ಮೂರ್ತಿಯಲ್ಲಿ ಕಾಣುವ ಹಾಗೆ ನನ್ನ ಕಣ್ಣುಗಳು ಒದ್ದೆಯಾಗಿವೆ.. ಭರತ ಭೂಮಿ .. ಇದು ಬರಿ ಭೂಮಿಯಲ್ಲ.. ಇದು ಸ್ವರ್ಗದ ಒಂದು ತುಣುಕು.. ಭಾರತಮಾತೆಯ ವರಪುತ್ರ ನರೇಂದ್ರ ಮೋದಿ ನಾಯಕತ್ವದಲ್ಲಿ ಈ ಭವ್ಯ ಭಾರತ ಮತ್ತೆ ಸುವರ್ಣಯುಗವನ್ನು ನೋಡಿಯೇ ನೋಡುತ್ತಿದೆ.. ಎಲ್ಲರಿಗೂ ಶುಭವಾಗಲಿ.. ನನ್ನ ಜನುಮದಿನವನ್ನು ನಿಮ್ಮೆಲ್ಲರ ಜನುಮದಿನಂದಂತೆ ಆಚರಿಸುತ್ತಿರುವ ನಿಮಗೆ.. ಮತ್ತು ನಿಮ್ಮೆಲ್ಲರ ನೆಚ್ಚಿನ ನಾಯಕ ನರೇಂದ್ರ ಮೋದಿಯವರಿಗೆ ಶುಭವಾಗಲಿ.. "

"ಶ್ರೀ ಏಳಿ ಎದ್ದೇಳಿ.. ಆಫೀಸಿಗೆ ಹೋಗುವ ಸಮಯವಾಯಿತು.. ಯಾಕಿಷ್ಟು ನಿದ್ದೆ ಮಾಡುತ್ತಿದ್ದೀರಿ.. "

ಕಣ್ಣು ಬಿಟ್ಟೆ.. "ಶ್ರೀ ರಾಮಚಂದ್ರ ಬಾಲಕನಾಗಿ ಆ ಚಿತ್ರದಲ್ಲಿ ನಗುತ್ತ All the best Sri" ಅಂತ ಹೇಳಿದಂತೆ ಆಯಿತು.. 


ಮನಸ್ಸಿನಲ್ಲಿಯೇ "ಜೈ  ಶ್ರೀ ರಾಮ್" ಎಂದೇ.. ಮೊಬೈಲಿನಲ್ಲಿ ಶ್ರೀ ವಿಷ್ಣು ಸಹಸ್ರನಾಮದಲ್ಲಿನ 

"ಶ್ರೀರಾಮ ರಾಮ ರಾಮೇತಿ ರಮೇ ರಾಮೇ ಮನೋರಮೇ | ಸಹಸ್ರನಾಮ ತತ್ತುಲ್ಯಂ ರಾಮನಾಮ ವರಾನನೇ" ಶ್ಲೋಕ ಬರುತ್ತಿತ್ತು.. 

ಶ್ರೀ ಕೃಷ್ಣನ ಫೋಟೋ ನೋಡಿದೆ.. ಶಭಾಷ್ ಶ್ರೀ ಎಂದಂತೆ ಆಯಿತು.. ಶ್ರೀ ರಾಮನ ಫೋಟೋ ನೋಡಿದೆ.. ಬಂಗಾರದ ಮೊಗದಲ್ಲಿ ನಸು ನಗು ಕಂಡಿತು!

Sunday, March 24, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೨

ಜೀವ ಜಡರೂಪ ಪ್ರಪಂಚವನದಾವುದೋ|
ಆವರಿಸಿಕೊಂಡುಮೊಳನೆರೆದುಮಿಹುದಂತೆ||
ಭಾವಕೊಳಪಡದಂತೆ ಅಳತೆಗಳವಡದಂತೆ|
ಆ ವಿಶೇಷಕ್ಕೆ ಮಣಿಯೊ - ಮಂಕುತಿಮ್ಮ|| ೨||

-ಚಿತ್ರಕೃಪೆ  ಗೂಗಲೇಶ್ವರ 

ಬಭೃವಾಹನ ಚಿತ್ರ.. ಅರ್ಜುನ ತೀರ್ಥಯಾತ್ರೆಗೆ ಹೋಗಿರುತ್ತಾನೆ.. ಅರ್ಜುನ ನದಿಯಲ್ಲಿ ಜಳಕ ಮಾಡುತ್ತಿದ್ದಾಗ ಮೋಹಿತಳಾದ ನಾಗಲೋಕದ ಕೌರವ್ಯನ  ಮಗಳು ಉಲೂಚಿ ಹಾವಿನ ರೂಪದಲ್ಲಿ ಬಂದು ಅವನನ್ನು ನಾಗಲೋಕಕ್ಕೆ ಕರೆದೊಯ್ಯುತ್ತಾಳೆ. ಅಲ್ಲಿ ಅರ್ಜುನನ ಮೈಮರೆತಿರುವಾಗ ಆತನಿಗಿಗಾಗಿ ಇನ್ನೆರೆಡು ಜೀವಗಳು ಕಾಯುತ್ತಿವೆ ಎಂದು ಶ್ರೀ ಕೃಷ್ಣ ಅರ್ಜುನನನ್ನು ಮಣಿಪುರಕ್ಕೆ ತನ್ನ ಮಾಯೆಯಿಂದ ಕರೆಸುತ್ತಾನೆ.  

ಮಣಿಪುರದ ರಾಜಕುಮಾರಿ ಚಿತ್ರಾಂಗದೆಯನ್ನು ಕಂಡು ಮೋಹಿತನಾಗಿ ಗಾಂಧರ್ವ ವಿವಾಹವಾಗುತ್ತಾನೆ. ಅಲ್ಲಿಯೂ ಅರ್ಜುನನನ್ನು ಉಳಿಯಲು ಬಿಡದೆ,  ಶ್ರೀಕೃಷ್ಣ ಲೋಕಕಲ್ಯಾಣ ಕಾರ್ಯದ ಹಾದಿಯಲ್ಲಿ ಅರ್ಜುನ ಶ್ರೀ ಕೃಷ್ಣನ ತಂಗಿ ಸುಭದ್ರೆಯನ್ನು ಮದುವೆಯಾಗಬೇಕಾಗಿರುತ್ತದೆ. ಆದ್ದರಿಂದ ಭೀಮ ಪುತ್ರ ಘಟೋತ್ಕಚನ ಮೂಲಕ ಅರ್ಜುನನನ್ನು ದ್ವಾರಕೆಗೆ ಕರೆಸಿಕೊಳ್ಳುತ್ತಾನೆ.. 

ಆದರೆ ಇತ್ತ ಅರ್ಜುನನಿಂದ ಗರ್ಭಿಣಿಯಾಗಿರುವ ಚಿತ್ರಾಂಗದೆ, ಮತ್ತು ಗಾಂಧರ್ವ ವಿವಾಹಿತೆ ಉಲೂಚಿ ಅರ್ಜುನನನ್ನು ಕಾಣದೆ ಪರಿತಪಿಸುವಾಗ ಮತ್ತು ಪ್ರಜೆಗಳು ಚಿತ್ರಾಂಗದೆ ಮತ್ತು ಉಲೂಚಿಯನ್ನು ಸಾಮಾಜಿಕ ದೃಷ್ಟಿಯಲ್ಲಿ ಕಳಂಕಿತಳು ಎಂದು ನೋಡಬಹುದು ಎಂದು ನಾಗಲೋಕದ ಅರಸು ಕೌರವ್ಯ ಮಣಿಪುರಕ್ಕೆ ಬಂದು ಎಲ್ಲಾ ರಾಜ ಮಹಾರಾಜರು,ಮಂತ್ರಿಗಳು, ಸಾಮಂತರನ್ನು,  ಪ್ರಜೆಗಳನ್ನು ಉದ್ದೇಶಿಸಿ "ಮಹಾರಾಜಾ, ಮಂತ್ರಿಗಳೇ, ಸಾಮಂತರೆ  ನಮ್ಮೆಲ್ಲರ ಜೀವನ ಸೂತ್ರವನ್ನ ಒಂದು ಮಹಾಶಕ್ತಿಯು ಹಿಡಿದು ಆಡಿಸುತ್ತಿದೆ, ಆ ಮಹಾಶಕ್ತಿಯೇ ಪಾರ್ಥನನ್ನು ಈ ಸ್ಥಳದಿಂದ ಬೇರೊಂದು ಸ್ಥಳಕ್ಕೆ ಕರೆದುಕೊಂಡು ಹೋಗಿದೆ.. ಕಾಲ ಬರುವ ತನಕ ಚಿತ್ರಾಂಗದೆ ಮತ್ತು ಉಲೂಚಿಯನ್ನುಆದರಿಸಬೇಕು ಎಂದು ಹೇಳುತ್ತಾನೆ .. 

ನಮ್ಮ ಜಗತ್ತಿನಲ್ಲೂ ನಮ್ಮ ಬದುಕಿನಲ್ಲೂ ಹಾಗೆ ಅಂದುಕೊಂಡದ್ದು ನೆಡೆಯದೆ, ಅಥವ ಫಲಿತಾಂಶ ನಿಧಾನವಾಗುತ್ತದೆ. ಊಹಿಸದ ಚಮತ್ಕಾರಗಳು ನೆಡೆಯುತ್ತವೆ.. ಆಗ ನಮಗೆ ಅಚ್ಚರಿಯಾಗುವುದು ಉಂಟು. ಆ ಮಹಾಮಹಿಮನ ಮುಂದಿನ ನೆಡೆ, ಆತ ನಮ್ಮ ಬದುಕಲ್ಲಿ ಮಾಡುವ ಚಮತ್ಕಾರಗಳು ಎಣಿಸಲಸಾಧ್ಯ, ಊಹಿಸಲಸಾಧ್ಯ.. 

ಸಕಲ ಚರಾಚರವಸ್ತುಗಳಲ್ಲಿ ಅಣುರೇಣು ತೃಣಕಾಷ್ಠಗಳಲ್ಲಿ ಆತನ ವಿಶೇಷ ಶಕ್ತಿ, ವಿಶಿಷ್ಟ ಮಾಯೆ, ಪ್ರಪಂಚದಲ್ಲಿ ನಮ್ಮ ಎಣಿಕೆಗೆ ಸಿಗದೇ ಆದರೆ ಅದು ನಮ್ಮ ಬದುಕನ್ನು ಮುನ್ನೆಡೆಸುವ ದಾರಿದೀಪವಾಗುತ್ತದೆ.. ಆ ವಿಶೇಷ ಶಕ್ತಿಗೆ ಒಂದು ನಮಸ್ಕಾರ ಹಾಕಿ  ಎಂದು ಹೇಳುವ , ಈ ವಿಷಯವನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಟ್ಟ ಕಗ್ಗದ ಅಜ್ಜನಿಗೆ ಒಂದು  ನಮಸ್ಕಾರ ಎನ್ನೋಣವೇ !!!

Sunday, March 17, 2024

ಕಗ್ಗಂಟಿನ ಕರದಂಟು - ಡಿವಿಜಿ ಅಜ್ಜ - ೧

ಜಗತ್ತೇ ಒಂದು ಕಗ್ಗಂಟಾಗಿರುವಾಗ ಅದರೊಳಗೆ ಮಂಕುತಿಮ್ಮ ಎಂಬ ಪಾತ್ರದ ಮೂಲಕ, ಜಗತ್ತಿನ ವಿಶೇಷಗಳನ್ನು, ವಿಶಿಷ್ಟತೆಗಳನ್ನು, ತಾವು ಓದಿದ ಪುರಾಣ, ಪುಣ್ಯಕತೆಗಳು, ಐತಿಹಾಸಿಕ ಕ್ಷಣಗಳು, ತಾವು ಕೇಳಿದ ಜನಜನಿತ ಕತೆಗಳು, ಹಾಡುಗಳು, ಸಂಗತಿಗಳು, ತಮ್ಮ ಬದುಕಿನ ಕಥೆಗಳು.. ಜಗತ್ತಿನಲ್ಲಿ ನೆಡೆಯುವ ಅನೇಕಾನೇಕ ಪವಾಡಸದೃಶ್ಯಗಳನ್ನು ನಾಲ್ಕು ಸಾಲುಗಳಲ್ಲಿ ಹಿಡಿದಿಡುತ್ತಾ, ಸಾರ್ವಕಾಲಿಕ ಸತ್ಯವಾದ ಕಗ್ಗಗಳನ್ನು ಸೃಷ್ಟಿಸಿರುವ ಕಗ್ಗದ ಅಜ್ಜನಿಗೆ ನಮಿಸುತ್ತಾ.. ಈ ಜೈತ್ರಯಾತ್ರೆಯನ್ನು ಆರಂಭಿಸುತ್ತಿದ್ದೇನೆ.. 


ಚಿತ್ರಕೃಪೆ - ಗೂಗಲೇಶ್ವರ 

ನನ್ನ ಬದುಕಿನ ಹಾದಿಗೆ ದಾರಿ ದೀಪವಾಗಿದ್ದು ಅನೇಕ ವಿಷಯಗಳು.. ಮಹಾಭಾರತ, ಇತರ ಮಹಾಭಾರತದ ಕೊಂಡಿಯಿರುವ ಪುರಾಣ ಕಥೆಗಳು, ಭಗವದ್ಗೀತೆ, ಚಾಣಕ್ಯ, ದೇವಾನುದೇವತೆಗಳ ಕಥೆಗಳು ಇವುಗಳ ಜೊತೆಯಲ್ಲಿ ಸಿನಿಮಾಗಳು ಬಹಳ ಪ್ರಭಾವ ಬೀರಿದ್ದವು.. ಹಾಗಾಗಿ ಆ ಅನುಭವಗಳ ಮೂಟೆಯನ್ನು ಹೊತ್ತು ಸಿನೆಮಾಗಳ ಅನೇಕ ಪ್ರೇರಣಾತ್ಮಕ ಸನ್ನಿವೇಶಗಳನ್ನು, ಹಾಡುಗಳನ್ನು, ಸಾಹಸ ದೃಶ್ಯಗಳನ್ನು ಕಗ್ಗದ ಕಡಲಿಗೆ ಸಮೀಕರಿಸುವ ಒಂದು ದುಸ್ಸಾಹಸಕ್ಕೆ ಕೈ ಹಾಕೋಣ ಎನಿಸಿತು.. ಬಂಧು ಮಿತ್ರರು ಪ್ರೇರೇಪಿಸಿದರು, ಹಾಗಾಗಿ ಈ ಹೆಜ್ಜೆಗಳು..  

ಇಂದು ಅವರ ಜನುಮದಿನ, ಶುಭಾರಂಭವಾಗಲಿ, ಅಜ್ಜನ ಆಶೀರ್ವಾದ ಈ ಸರಣಿಗೆ ಉಸಿರು ತುಂಬಲಿ ಎಂದು ಆಶಿಸುತ್ತಾ, .. ಈ ಪುಟ್ಟ ಪುಟ್ಟ ಹೆಜ್ಜೆಯನ್ನು ಇಡಲು ಶುರು ಮಾಡುತ್ತೇನೆ!!!

                                                                            ******

ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಲೋಲ,                                                                                          ದೇವ ಸರ್ವೇಶ ಪರಬ್ಬೊಮ್ಮನೆಂದು ಜನಂ||                                                                                            ಆವುದನು ಕಾಣದೊಡಮಳ್ತಿಯಿಂ ನಂಬಿಹುದೊ|                                                                                ಆ ವಿಚಿತ್ರಕೆ ನಮಿಸೊ - ಮಂಕುತಿಮ್ಮ|| ೧||


ದಶಾವತಾರಗಳನ್ನು ತಾಳಿದ ವಿಷ್ಣು.. ಸೃಷ್ಟಿಕರ್ತ ಬ್ರಹ್ಮನ ಪಿತಾ.. ಜಗತ್ತನ್ನು ಸ್ಥಿತಿಯಲ್ಲಿಡುವ ದೈವ, ದುಷ್ಟ ಶಿಕ್ಷಕ ಶಿಷ್ಟ ರಕ್ಷಕ ಹೀಗೆ ಹತ್ತಾರು ಗುಣವಿಶೇಷಣಗಳನ್ನು ಹೊಂದಿರುವ ವಿಷ್ಣು.. ಮತ್ತು ಅವನ ಶಕ್ತಿಗೆ, ಅವನ ಯುಕ್ತಿಗೆ, ಯಾವುದೇ ಸಂದರ್ಭದಲ್ಲಿಯೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳದೆ, ಸಮಸ್ಯೆಗಳನ್ನು ಉಪಯುಕ್ತವಾದ ರೀತಿಯಲ್ಲಿ ಬಗೆಹರಿಸುವ ಆ ವಿಶೇಷ ಶಕ್ತಿಗೆ, ವಿಚಿತ್ರ ಶಕ್ತಿಗೆ ನಮಿಸೋಣ ಎನ್ನುವ ಮಾತನ್ನು ಅಜ್ಜ ನಮಗೆ ಹೇಳುತ್ತಾರೆ. 

 ತನ್ನ ದ್ವಾರ ಪಾಲಕರಾದ ಜಯವಿಜಯರು ಶಾಪಗ್ರಸ್ತರಾಗಿ, ಮೂರು ಜನ್ಮಗಳಲ್ಲಿ ದುಷ್ಟರಾಗಿ ಜನಿಸಿ ಹರಿಯಿಂದ ಹತರಾಗಿ ಮರಳಿ ವೈಕುಂಠಕ್ಕೆ ಮರಳುವ ಹಂತಗಳಲ್ಲಿ ಮೊದಲನೆಯ ಅವತಾರ ಹಿರಣ್ಯಾಕ್ಷ-ಹಿರಣ್ಯಕಶಿಪು. 

ಹಿರಣ್ಯಾಕ್ಷ ವಿಷ್ಣುವನ್ನು ವರಾಹ ರೂಪದಲ್ಲಿ ಧರೆಗಿಳಿಸಿ ಹತನಾಗಿ ವೈಕುಂಠ ಸೇರುತ್ತಾನೆ.. ಆದರೆ ಇನ್ನಷ್ಟು ಬಲಾಢ್ಯನಾದ ಹಿರಣ್ಯಕಶಿಪು ತನ್ನ ಸುತ  ಪ್ರಹ್ಲಾದ ಹರಿಭಕ್ತನಾಗಿದ್ದರಿಂದ ಆತನನ್ನು ಅನೇಕ ಶಿಕ್ಷೆಗಳಿಗೆ ಗುರಿಪಡಿಸಿದರೂ ಅಳಿಯದ ಪ್ರಹ್ಲಾದನ ಜೊತೆ ನೆಡೆಯುವ ಅಂತಿಮ ಸಂಭಾಷಣೆ ಈ ಕಗ್ಗಕ್ಕೆ ಸಮೀಕರಿಸಬಹುದು.. 

ಹರಿಯು ಸರ್ವಾಂತರಯಾಮಿ ಎನ್ನುತ್ತಾ, ಸೃಷ್ಟಿಗೆ ಆತನೇ ಶಕ್ತಿ ಎನ್ನುತ್ತಾ.. ವಿಷ್ಣುವು ಹತ್ತು ಹಲವಾರು ಹೆಸರುಗಳಿಂದ ಕಂಗೊಳಿಸುತ್ತಿದ್ದಾನೆ ಎನ್ನುವಾಗ ಕುಪಿತಗೊಂಡ ಹಿರಣ್ಯಕಶಿಪು .. ಈ ಜಗತ್ತಿಗೆಲ್ಲ ನಾನೇ ಸರ್ವೇಶ್ವರ.. ಎಂದಾಗ ಪ್ರಹ್ಲಾದ ನೀನು ನನಗೆ ಜನ್ಮಕೊಟ್ಟವನು.. ನಿನಗೆ ಜನ್ಮಕೊಟ್ಟವರು ಯಾರು ಎಂದಾಗ.. ಕಶ್ಯಪ ಬ್ರಹ್ಮ.. ಎನ್ನುತ್ತಾನೆ.. ಅವರ ತಂದೆ ಎಂದಾಗ ಚತುರ್ಮುಖ ಬ್ರಹ್ಮ ಎನ್ನುತ್ತಾನೆ.. ಅವರ ತಂದೆ ಎಂದಾಗ ನಿರುತ್ತರನಾಗುತ್ತಾನೆ.. 

ಚತುರ್ಮುಖ ಬ್ರಹ್ಮನ ತಂದೆ ಯಾರು.. ಯಾರಾದರೂ ಇರಲೇಬೇಕಲ್ಲ ಎಂದಾಗ.. ಯಾರು ಅವರು ಎನ್ನುತ್ತಾನೆ ಹಿರಣ್ಯಕಶಿಪು.. ಆಗ ಅವನೇ ಶ್ರೀಮನ್ನಾರಾಯಣ ಎನ್ನುತ್ತಾನೆ.. 

ಹೀಗೆ ಒಂದು ಕಲ್ಲಿನ ಮೇಲೆ ಇನ್ನೊಂದು ಕಲ್ಲು.. ಅದರ ಮೇಲೆ ಇನ್ನೊಂದು.. ಹೀಗೆ ಜೋಡಿಸುತ್ತಾ ಹೋದಾಗ ಕಡೆಯಲ್ಲಿ ನಿಲ್ಲುವುದು ವಿಷ್ಣುವಿನ ಉಪಸ್ಥಿತಿ ಎನ್ನುವ ತತ್ವನ್ನು ಈ ಸಂಭಾಷಣೆ ಹೇಳುತ್ತದೆ.. 



ಮತ್ತೆ ಇನ್ನೊಂದು ಕಗ್ಗದ ಸುತ್ತಾ ಓಡಾಡೋಣ!!!

Saturday, February 3, 2024

ಅಹಲ್ಯಾಶಬರಿ ಉಪಾಖ್ಯಾನದ ಅನುಭವ.. !

ಅಣ್ಣಾವ್ರ "ನಾನೂ ನೀನೂ ನೆಂಟರಯ್ಯ .. ನಮಗೆ ಭೇದ ಇಲ್ಲವಯ್ಯಾ ವಿಠ್ಠಲ .. " ಭಕ್ತ ಕುಂಬಾರದ ಅದ್ಭುತ ಹಾಡು ಬರುತಿತ್ತು.. ಮನೆಯ ಕರೆಘಂಟೆ ಸದ್ದು ಮಾಡಿತು.. 

ಬಾಗಿಲು ತೆಗೆದರೆ ಅಹಲ್ಯೆ ಮತ್ತು ಶಬರಿ .. ಬಿಳಿ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.. 

ಅರೆ ನೀವು ನನ್ನ ಮನೆಯ ಬಾಗಿಲಲ್ಲಿ.. "ವೆಲ್ಕಮ್ ವೆಲ್ಕಮ್.. "

ನಗುತ್ತಾ ಅಹಲ್ಯೆ ಮತ್ತು ಶಬರಿ ಒಳಗೆ ಬಂದರು.. ಸಾಂಪ್ರದಾಯಿಕವಾದ ಸ್ವಾಗತ ನೆಡೆಯಿತು.. ಹಣೆಯಲ್ಲಿ ಕುಂಕುಮ.. ನಿಗಿ ನಿಗಿ ಹೊಳೆಯುತ್ತಿತ್ತು.. ಒಬ್ಬರ ಪ್ರತಿರೂಪ ಒಬ್ಬರು.. ಅಚಾನಕ್ ನೋಡಿದರೆ ಅಹಲ್ಯೆ ಶಬರಿ ಇಬ್ಬರೂ ಅಕ್ಕ ತಂಗಿ ಎನ್ನಬಹುದಿತ್ತು.. ಹಾಗಿದ್ದರೂ.. ಅದೇ ರೂಪ, ಅದೇ ಮುಖ.. ಅದೇ ನಗು.. ಆದರೆ ಅಹಲ್ಯೆ ಕಣ್ಣುಗಳು ಹೊಳೆಯುತ್ತಿದ್ದವು.. ಶಬರಿ ಕಣ್ಣುಗಳು ಮಿನುಗುತ್ತಿದ್ದವು.. 

ಶಬರಿ ನಸು ನಗುತ್ತಾ ಒಳಗೆ ಕಾಲಿಟ್ಟಳು.. ಅಹಲ್ಯೆ ಹಾಯ್ ಎನ್ನುತ್ತಾ ನಗುವ ಕಂಗಳ ಜೊತೆ ಒಳಗೆ ಬಂದಳು.. ಸುಮ್ಮನೆ ಇರದ ಕ್ಯಾಮೇರಾ ಕಚ ಕಚ ಅಂತ ಫೋಟೋ ತೆಗೆಯುತಿತ್ತು.. 

ಸುಂದರ ದೃಶ್ಯ.. ಕಂಗಳು ಮಂಜಾಗಿದ್ದವು.. ಆದರೆ ಕ್ಯಾಮೆರಾ ಕಣ್ಣುಗಳು ಅಲ್ಲ.. ಆ ಕ್ಷಣಗಳನ್ನು ಆಸ್ವಾಧಿಸುವುದೇ ಒಂದು ಅದ್ಭುತ ಅನುಭವ.. 

ಉಭಯಕುಶಲೋಪರಿ ಮಾತುಗಳು ಆದವು.. ಅಹಲ್ಯೆ ಕಲ್ಲಾಗಿದ್ದವಳು ಶ್ರೀ ರಾಮನ ಪಾದ ಸ್ಪರ್ಶದಿಂದ ಮತ್ತೆ ಮರಳಿದ್ದಳು.. ಅಹಲ್ಯೆ ಶ್ರೀ ರಾಮನ ಅಂಶವಾಗಿದ್ದಳು..ಶ್ರೀ ರಾಮನನ್ನು ಅನುಕ್ಷಣವೂ ಜಪಿಸುವಂಥಹ, ನೆನಪಿಸುವಂತಹ ದಿವ್ಯ ಬದುಕಾಗಿತ್ತು.. ನೋಡುತ್ತಾ ನೋಡುತ್ತಾ ಬದುಕು ಅಹಲ್ಯೆಯ ಬದುಕು ಸುಂದರವಾಗಿತ್ತು.. ಶ್ರೀ ರಾಮನ ಸಾನಿಧ್ಯವೇ ಆಕೆಯ  ಬದುಕಿನ ಮಂತ್ರವಾಗಿತ್ತು..

ಶಬರಿ ಶ್ರೀ ರಾಮನ ಬರುವಿಕೆಗಾಗಿ ಅತ್ಯುತ್ತಮ ಹಣ್ಣುಗಳನ್ನು ಆರಿಸಿ ಆರಿಸಿ ಶ್ರೀ ರಾಮನಿಗೆ ಕೊಡಲು ಇಟ್ಟಿದ್ದು.. ಅದನ್ನು ಶ್ರೀ ರಾಮನಿಗೆ ಕೊಟ್ಟ ಮೇಲೆ ತನ್ನ ಬದುಕಿನ ಸಾರ್ಥಕ್ಯ ಕಂಡಿದ್ದು ಇದು ನಿಮಗೆಲ್ಲ ತಿಳಿದ ವಿಚಾರವೇ.. ಇಲ್ಲಿ ಸ್ವಲ್ಪ ಬದಲಾವಣೆಯಿತ್ತು.. 

ಶಬರಿ ಶ್ರೀ ರಾಮನಿಗೆ ಹಣ್ಣುಗಳನ್ನು ಕೊಡುವ ಬದಲು ಸಿಹಿ ತಂದಿದ್ದಳು.. ಶ್ರೀ ರಾಮನಿಗೆ ಅಚ್ಚರಿ, ಖುಷಿ ಎಲ್ಲವೂ ಕಣ್ಣುಗಳಲ್ಲಿ ತುಂಬಿತ್ತು.. ಮಾತುಗಳು ಆಡಲಾರದಷ್ಟು ಖುಷಿ.. ಯಾಕೆಂದರೆ.. ಶ್ರೀ ರಾಮನನ್ನು ಕಂಡು ಶಬರಿಗೆ ಖುಷಿ ಮನದಲ್ಲಿಯೇ ಮೂಡಿದ್ದರೆ.. ಶಬರಿಯ ಕಂಡು ಶ್ರೀ ರಾಮನಿಗೆ ಈ ಬಾರಿ ಧನ್ಯತಾ ಭಾವ .. ತನ್ನ ಮನೆಗೆ ಮಗಳು ಬಂದಷ್ಟು ಖುಷಿ. ... 

ಶಬರಿ ಹಣ್ಣುಗಳನ್ನು ಕಚ್ಚಿ ಒಳ್ಳೆಯ ಹಣ್ಣುಗಳನ್ನೇ ಕೊಟ್ಟ ಹಾಗೆ.. ಇಲ್ಲಿ ಶಬರಿ ತಂದಿದ್ದ ಸಿಹಿಯನ್ನು ಅವಳಿಗೆ ಒಂದು ತುಂಡು ತಿನ್ನಿಸಿ..Hope  you don't mind ಎಂದಾಗ.. ಶಬರಿಯ ಕಣ್ಣುಗಳ ಹೊಳಪನ್ನು ಕಂಡಾಗ ಅರೆ ಇದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬಾರದಿತ್ತೇ ಅನಿಸಿದ್ದು ಸುಳ್ಳಲ್ಲ.. 

ಕೆಲವು ಅನುಭವಗಳನ್ನು ಅನುಭವಿಸೋದು ..  ಆ ಅನುಭವವನ್ನು ಅಕ್ಷರ ರೂಪದಲ್ಲಿ ಹಿಡಿದಡೋದು ಎಲ್ಲವೂ ಒಂದು ಅದ್ಭುತ ಪಯಣದ ಮೈಲಿಗಲ್ಲುಗಳು.. 

ಮಗಳು ತಾಯಿಯ ಸಮಾನ ಅಂತಾರೆ.. ತಾಯಿಯನ್ನು ಇನ್ನೊಂದು ರೂಪದಲ್ಲಿ ಕಂಡು.. ಅದರ ಸಾಕ್ಷಾತ್ಕಾರವಾಗಿ ತಣ್ಣಗೆ ಇದನ್ನೆಲ್ಲಾ ಗಮನಿಸುತ್ತಿದ್ದ ತುಷಾರ ಹಾರದವಳ ನಸು ನಕ್ಕು ಖುಷಿಪಡುತ್ತಿದ್ದಳು .. 


"ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ" ಹಾಡು ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಬಂದಿದ್ದಾರೆ.. "ಕಾದಿರುವಳು ಶಬರಿ ಶ್ರೀ ರಾಮ ಬರುವನೆಂದು" ಶಾಲೆಯಲ್ಲಿ ಓದಿದ ಪದ್ಯ ನೆನಪಿಗೆ ಬಂತು.. 

ಇದೊಂದು ಅದ್ಭುತ ಅನುಭವ.. ಅಹಲ್ಯೆ, ಶಬರಿ, ತುಷಾರ, ಶ್ರೀ ರಾಮ ಎಲ್ಲರೂ ಧನ್ಯತಾ ಭಾವ ಅನುಭವಿಸುತ್ತಿದ್ದರು..!!!

ಶ್ರೀ ರಾಮನಂತೂ ಈ ಖುಷಿಯ ಸಂಗತಿಗಳಿಂದ ಪುಟ್ಟ ಹುಡುಗನಾಗಿ ಬಾಲರಾಮನೇ ಆಗಿ ನಲಿಯುತಿದ್ದ!


ಇರುವ ಮನೆಯೇ ಮಂದಿರವಾಗಿ.. ಅದೇ ಭವ್ಯ ಮಹಲಾಗಿ ಪರಿವರ್ತನೆಯಾದಂತೆ ಅನುಭವ.. ಮಹಲಿನ ಪ್ರತಿ ಕಣವೂ ಬೆಳಕಿನ ಪುಂಜದಿಂದ ಹೊಳೆಯಲು ಶುರು ಮಾಡಿತು.. !

Saturday, January 13, 2024

ಗಂಗೆ - ಭೀಷ್ಮ ಮಹಾಭಾರತ ..

ನಾಲ್ಕನೇ ತರಗತಿಯಲ್ಲಿ ರನ್ನನ ಗಧಾಯುದ್ಧದ ಒಂದು ಭಾಗ "ಊರುಭಂಗ" ಪಾಠವಿತ್ತು.. ವಿದ್ಯೆ ಕಲಿಯಬೇಕೆಂಬ ಆಸೆ ಹೊತ್ತು ಗುರುಗಳ ಬಳಿಗೆ ಬಂದಾಗ 

ರನ್ನನ ಪೂರ್ವಾಪರ ವಿಚಾರ ತಿಳಿದು " ಕೊಂಡು ತಂದು ಹೊತ್ತು ಮಾರಲು ವಿದ್ಯೆಯೇನು ಬಳೆಯ ಮಲಾರವೇ!" ಎಂದು ಹೇಳುತ್ತಾರೆ.. 

ಆದರೂ ಛಲ ಬಿಡದ ರನ್ನ ವಿದ್ಯೆ ಕಲಿತು.. ಮಹಾನ್ ಕವಿಯಾಗುತ್ತಾರೆ. 

ಆ ಪಾಠ ಓದಿ, ದುರ್ಯೋಧನ ಅಲಿಯಾಸ್ ರನ್ನ ಹೆಸರಿಸುವ ಸುಯೋಧನನ ಊರುಭಂಗ ಪಾಠ ನನ್ನ ಮಹಾಭಾರತದ ಹುಚ್ಚಿಗೆ ನಾಂದಿಯಾಯಿತು.. ನಂತರ ಏಳನೇ ತರಗತಿಯಲ್ಲಿ ಸೌಗಂಧಿಕಾ ಪುಷ್ಪ ಹರಣ ಪಾಠ ಮಹಾಭಾರತದ ಹುಚ್ಚಿಗೆ ಇನ್ನಷ್ಟು ನೀರೆರೆಯಿತು.. 

ಎಂಭತ್ತರ ದಶಕದ ಅಂತ್ಯದಲ್ಲಿ ದೂರದರ್ಶನದಲ್ಲಿ ಪ್ರಸಾರವಾದ ಬಿ ಆರ್ ಚೋಪ್ರಾ ಅವರ ಮಹಾಭಾರತ ಖುಷಿಕೊಟ್ಟಿತು. ಅಂದಿನಿಂದ ಇಂದಿನ ತನಕ ಮರುಪ್ರಸಾರವಾದಾಗೆಲ್ಲ ಬಹುಶಃ ಎಲ್ಲಾ ಕಂತುಗಳನ್ನು ನೋಡಿದ್ದೇನೆ ಮತ್ತು ಮುಂದೂ ನೋಡುತ್ತೇನೆ. 

ಪ್ರತಿಯೊಂದು ದೃಶ್ಯವೂ ಒಂದು ಅದ್ಭುತ ಸಂಯೋಜನೆ.. ಅಭಿನಯ, ಸೆಟ್ಟುಗಳು, ಸಂಭಾಷಣೆ, ಪಾತ್ರಧಾರಿಗಳ ಆಯ್ಕೆ (ಹ ಕೆಲವೊಂದು ಪಾತ್ರಗಳು ಬೇರೆ ಕಲಾವಿದರ ಆಯ್ಕೆ ಬೇಕು ಅನಿಸಬಹುದೇನೋ, ಆದರೆ ನನಗೆ ಓಕೆ), ಸಂಗೀತ, ಹಾಡುಗಳು ಎಲ್ಲವೂ ಅದ್ಭುತ. 

ನನಗೆ ಬಲು ಇಷ್ಟವಾದ ಅನೇಕ ದೃಶ್ಯಗಳಲ್ಲಿ ಎರಡನ್ನು ಇಲ್ಲಿ ಉಲ್ಲೇಖಿಸುತ್ತೇನೆ. 

ಒಂದನೇ ದೃಶ್ಯ 

ಭೀಷಣ ಪ್ರತಿಜ್ಞೆ ಮಾಡಿದ ದೇವವ್ರತ ತನಗೆ ಗೊಂದಲವಾದಾಗೆಲ್ಲ ತನ್ನ ತಾಯಿ ಗಂಗೆಯ ತೀರಕ್ಕೆ ಬಂದು ತಾಯಿಯನ್ನು ಕಂಡು ಮಾತಾಡಿ ಗೊಂದಲ ಪರಿಹರಿಸಿಕೊಳ್ಳುವುದು ರೂಢಿಯಾಗಿರುತ್ತದೆ. ಇದರಿಂದ ಬೇಸತ್ತ ಗಂಗೆ ಒಮ್ಮೆ ಭೀಷ್ಮನಿಗೆ ಹೇಳುತ್ತಾಳೆ "ನೀನು ಸಣ್ಣ ಮಗುವಿನ ತರಹ ಪ್ರತಿಬಾರಿಯೂ ದೂರುಗಳನ್ನು ತಂದು ನನಗೆ ಒಪ್ಪಿಸುತ್ತೀಯಾ.. ನಿನ್ನ ತಂದೆಗೆ ನೀನು ಮದುವೆಯಾಗೋಲ್ಲ ಅಂತ ಶಪಥ ಮಾಡಿದಾಗ ನನಗೆ ಹೇಳಲಿಲ್ಲ ನನ್ನ ಒಪ್ಪಿಗೆ ಪಡೆಯಲಿಲ್ಲ..  ನೀನು ಜೀವನದಲ್ಲಿ ಗಟ್ಟಿ ನಿರ್ಧಾರ ತೆಗೆದುಕೊಂಡಾಗ ನನ್ನ ಕೇಳಲಿಲ್ಲ ಆದರೆ ನಿನಗೆ ಸಮಸ್ಯೆ ಬಂದಾಗ ನನ್ನ ಬಳಿ ಓಡಿ ಬರುತ್ತೀಯ" ಎಂದಾಗ ಭೀಷ್ಮ ಕಣ್ಣಲ್ಲಿ ನೀರು ತುಂಬಿಕೊಂಡು "ಸರಿ ಮಾತೆ ಇನ್ನು ನೀನಾಗೆ ಬರುವ ತನಕ ನಾ ನಿನ್ನ ಬಳಿ ಬರುವುದಿಲ್ಲ" ಎಂದು ಹೇಳುತ್ತಾನೆ ಗಂಗೆ ಮಾಯವಾಗುತ್ತಾಳೆ. 

ಇಲ್ಲಿ ಗಂಗೆ ಪಾತ್ರಧಾರಿ ಕಿರಣ್ ಜುನೇಜಾ ಅದ್ಭುತಾವಾಗಿ ಮಾತಾಡುತ್ತಾಳೆ.. ಕಣ್ಣಿನ ಹೊಳಪು ಆ ಬಿಳಿ ಪೋಷಾಕು ಅದ್ಭುತವಾಗಿ ಕಾಣುತ್ತಾಳೆ. ಹಾಗೆಯೇ ತಾಯಿಯ ಮಮತೆಪೂರ್ಣ ಮಾತುಗಳು, ಅಭಿನಯ ಗಮನಸೆಳೆಯುತ್ತದೆ. 

ಭೀಷ್ಮನ ಪಾತ್ರಧಾರಿ ಮುಖೇಶ್ ಖನ್ನಾ ಬಗ್ಗೆ ಏನು ಹೇಳುವುದು, ಭೀಷ್ಮರೇ ಧರೆಗೆ ಬಂದರೂ ಮುಖೇಶ್ ಅವರಿಗೆ ಶಭಾಷ್ ಹೇಳದೆ ಹೋಗುವುದಿಲ್ಲ. ಅಷ್ಟು ಅದ್ಭುತ ಅಭಿನಯ. ಭೀಷ್ಮನಾಗಿಯೇ ಜೀವಿಸಿದ್ದಾರೆ. 

ಅವರ ಪ್ರತಿ ಮಾತುಗಳು, ಸಂಭಾಷಣೆಯ ಏರಿಳಿತ ಅದ್ಭುತ. 

ನಾವು ತೆಗೆದುಕೊಳ್ಳುವ ನಿರ್ಧಾರ ಪರಿಣಾಮ ಎದುರಿಸುವ ಶಕ್ತಿಯೂ ನಮಗೆ ಬರಬೇಕು.. ನಮಗೆ ಇರಬೇಕು.. ನಿರ್ಧಾರ ನಮ್ಮದು ಪರಿಹಾರ ಇನ್ನೊಬ್ಬರು ಕೊಡುವುದು ಎಂದು ಕುಳಿತಾಗ ಸಮಸ್ಯೆ ಇನ್ನಷ್ಟು ಜಟಿಲವಾಗುತ್ತದೆ. ಭೀಷ್ಮ ತನ್ನ ತಂದೆಗೂ ಹೇಳದೆ ತಾಯಿಯ ಸ್ಥಾನಕ್ಕೆ ಬರಬಹುದಾದ ಸತ್ಯವತಿಯ ತಂದೆಗೆ ಕೊಡುವ ಮಾತು.. ಆದರೆ ಆ ಸಮಯದಲ್ಲಿ ಗಂಗೆಯೂ ಇರುವುದಿಲ್ಲ, ಶಾಂತನೂ ಕೂಡ ಇರುವುದಿಲ್ಲ. ಆ ಸಮಯದಲ್ಲಿ ಸರಿ ಅನಿಸುವ ನಿರ್ಧಾರ ಭೀಷ್ಮ ತಳೆಯುತ್ತಾನೆ ಆದರೆ ಅದರ ಪರಿಣಾಮ ಶರಶಯ್ಯೆಗೆ ತಂದು ನಿಲ್ಲಿಸುತ್ತದೆ. 

ಎರಡನೆಯ ದೃಶ್ಯ 

ಭೀಷ್ಮ ಇಚ್ಚಾಮರಣಿ, ಅವ ಇರುವ ತನಕ ಪಾಂಡವರು ಕುರುಕ್ಷೇತ್ರದ ಯುದ್ಧದಲ್ಲಿ ಏನೂ ಸಾಧಿಸಲಾಗದೆ ಚಿಂತಾಕ್ರಾಂತರಾಗಿರುತ್ತಾರೆ. ಆಗ ಕೃಷ್ಣನ ಮಾತಿನಂತೆ ಭೀಷ್ಮರ ಹತ್ತಿರ ಬಂದಾಗ ತಾನು ನಾರಿಯ ಮುಂದೆ ಯುದ್ಧ ಮಾಡುವುದಿಲ್ಲ  ಎಂದು ತನ್ನನ್ನು ರಣರಂಗದಿಂದ ದೂರಮಾಡುವ ಉಪಾಯ ಹೇಳಿಕೊಡುತ್ತಾನೆ. ಆಗ ರಾತ್ರಿ ಭೀಷ್ಮ ಕುರುಕ್ಷೇತ್ರಕ್ಕೆ ಬರುತ್ತಾನೆ.. ಒಂದು ಹೆಂಗಸು ಭೂಮಿಯಲ್ಲಿನ ಸಣ್ಣ ಸಣ್ಣ ಕಲ್ಲುಗಳನ್ನು ಆರಿಸುತ್ತಿರುವುದನ್ನು ಕಂಡು.. ಹತ್ತಿರ ಬಂದಾಗ ಗೊತ್ತಾಗುತ್ತದೆ ಇದು ತನ್ನ ತಾಯಿ ಗಂಗೆ ಎಂದು. 

ಅತೀವವಾದ ಖುಷಿಯಿಂದ ಹತ್ತಿರ ಬಂದು ಮಾತಾಡಿಸಿದಾಗ.. ಗಂಗೆ ಹೇಳುತ್ತಾಳೆ ನೆಲವನ್ನು ಸ್ವಚ್ಛಗೊಳಿಸುತ್ತಿದ್ದೆ.. ನೀನು ಇಲ್ಲಿ ಮಲಗಿಕೊ, ತುಂಬಾ ದಣಿದಿದ್ದೀಯ.. ನಿನಗೆ ವಿಶ್ರಾಂತಿ ಬೇಕು" ಎಂದಾಗ ಭೀಷ್ಮ ಎಲ್ಲಾ ಋಣವನ್ನು ಕೊಟ್ಟು ಮುಗಿಸಿದೆ.. ಆದರೆ ಅಂಬಾಳ ಋಣವೊಂದಿದೆ.. ನಾಳೆ ಅದನ್ನು ತೀರಿಸುತ್ತೇನೆ.."

ಬಂದು ಬಿಡು ಸ್ವರ್ಗಕ್ಕೆ ಎಂದು ಗಂಗೆ ಹೇಳಿದಾಗ.. ಹಸ್ತಿನಾಪುರ ನಾಲ್ಕು ದಿಕ್ಕುಗಳಿಂದ ಸುರಕ್ಷಾ ಸ್ಥಿತಿಯಲ್ಲಿದೆ ಎಂದು ಅರಿವಾದಾಗ ಖಂಡಿತ ಬರುತ್ತೇನೆ ಎಂದು ಹೇಳಿ ಗಂಗೆಯನ್ನು ಕಳಿಸುತ್ತಾನೆ. 


ನಿಜ ನಾವು ತೆಗೆದುಕೊಳ್ಳುವ ನಿರ್ಧಾರದ ಫಲಿತಾಂಶ ನಮಗೆ ಗೊತ್ತಾಗಿ ಬಿಟ್ಟರೆ, ನಿರ್ಧಾರ ತೆಗೆದುಕೊಳ್ಳುವ ಗಟ್ಟಿ ಮನಸ್ಸು ಪೊಳ್ಳಾಗಿಬಿಡುತ್ತದೆ. ತನ್ನ ಒಂದು ನಿರ್ಧಾರ ಕುರುಕ್ಷೇತ್ರದ ಶರಶಯ್ಯೆಯಲ್ಲಿ ಕೊನೆಗೊಳ್ಳುತ್ತದೆ ಎಂದು ತಿಳಿದಿದ್ದಿದರೆ ಭೀಷ್ಮ ಅವರ ನಿರ್ಧಾರ ಖಂಡಿತ ಅಷ್ಟೊಂದು ಭೀಷಣವಾಗಿ ಇರುತ್ತಿರಲಿಲ್ಲ ಅಲ್ಲವೇ. 

ಆ ಸಮಯಕ್ಕೆ ಸರಿ ಅನ್ನೊದು ನಾವು ನಮ್ಮ ಮನಸ್ಸಿನ ಸ್ಥಿತಿಯ ಮೇಲೆ ಅವಲಂಬಿತ. 

ಅದ್ಭುತ ಸನ್ನಿವೇಶಗಳು.. 

ಭೀಷ್ಮ ಉತ್ತರಾಯಣ ಪುಣ್ಯ ಕಾಲದಲ್ಲಿ ಈ ಭುವಿಯನ್ನು ಬಿಡುವ ನಿರ್ಧಾರ ಮಾಡಿದ ಸಮಯವಿದು.. ಸಂಕ್ರಾಂತಿ ನಮ್ಮ ಬದುಕಲ್ಲಿ ಒಂದು ಸಣ್ಣ ಕ್ರಾಂತಿಯನ್ನು ತರುವ ಒಂದು ನಿರ್ಧಾರ ನಮ್ಮದಾಗಿದೆ ಎಂದರೆ ಅದೇ ಅಲ್ಲವೇ Someಕ್ರಾಂತಿ. 

ಎಲ್ಲರಿಗೂ   ಮಕರ ಸಂಕ್ರಾಂತಿಯ ಶುಭಾಶಯಗಳು!

Friday, January 12, 2024

ಹೃದಯದಲಿ ಇದೇನಿದು ನದಿಯೊಂದು ಓಡಿದೆ!!!

 ಪುಟ್ಟ ವಯಸ್ಸಿನಲ್ಲಿಯೇ ಪಾರು ಮತ್ತೆ ಪರಮು ಅರ್ತಾತ್ ಪಾರ್ವತೀ ಮತ್ತು ಪರಮೇಶ  ತಂದೆತಾಯಿಯನ್ನು ಕಳೆದುಕೊಂಡಿದ್ದರು.. ಬಂಧು ಬಳಗ ಎಲ್ಲರೂ ಇವರನ್ನು ದೂರವಿಟ್ಟಿದ್ದರು.. ಇವರಿಬ್ಬರೂ ಒಂದೇ ಬೀದಿಯಲ್ಲಿ ಆಡಿ ಬೆಳೆದವರು.. ಪ್ರೀತಿ ಪ್ರೇಮ ಎಂಬ ಹಂಗಿಗೆ ಹೋಗಿರಲಿಲ್ಲ ಆದರೆ ಪರಿಚಯ ಚೆನ್ನಾಗಿದ್ದರಿಂದ, ಜೊತೆಯಲ್ಲಿಯೇ ಹೆಗಲಿಗೆ ಹೆಗಲು ಕೊಟ್ಟು ಬೆಳೆದರು. 

ತುಂಡು ಭೂಮಿ ಇಬ್ಬರಿಗೂ ಇತ್ತು.. ಬದುಕಲು ಆಶ್ರಯ ಕೊಡುವ ಸಣ್ಣದಾದ ಮನೆಯೊಂದಿತ್ತು.. ಹೇಗೋ ಬಂಧು ಮಿತ್ರರು ಇವರನ್ನು ದೂರವಿಟ್ಟಿದ್ದರಿಂದ, ಅಸ್ತಿ ಅದು ಇದು ಅನ್ನುವ ತಗಾದೆ ಇರಲಿಲ್ಲ.. ಎತ್ಲಾಗಾದರೂ ಹೋಗಿ ಸಾಯಲಿ ಎಂದು ಎಲ್ಲರೂ ದೂರ ಇಟ್ಟಿದ್ದು ಒಂದು ರೀತಿಯಲ್ಲಿ ಒಳ್ಳೆಯದೆ ಆಗಿತ್ತು.. 

ಚಿತ್ರಕೃಪೆ - ಗೂಗಲೇಶ್ವರ 

ಹೊಲದಲ್ಲಿ ಕಷ್ಟಪಟ್ಟು ಏನು ಸಾಧ್ಯವೋ ಅದನ್ನು ಬೆಳೆಯುತ್ತಿದ್ದರು, ಸೊಪ್ಪು, ತರಕಾರಿ, ಬೆಳೆ, ಶುಂಠಿ, ಭತ್ತ, ರಾಗಿ ಹೀಗೆ ಆ ಕಾಲಕ್ಕೆ ಏನು ಫಸಲು ಬರಲು ಸಾಧ್ಯವೋ ಅದನ್ನೇ ಆ ತುಂಡು ಭೂಮಿಯಲ್ಲಿ ಬೆಳೆಯುತ್ತಿದ್ದರು.. ಊಟಕ್ಕೆ ಮೋಸವಿರಲಿಲ್ಲ.. ಜೊತೆಗೆ ಬೆಳೆದ ಸಂಪನ್ನದಿಂದ ಅದನ್ನು ಮಾರಿ ಒಂದಷ್ಟು ದುಡ್ಡು ಕೂಡಿಡುತ್ತಿದ್ದರು.. 

ಚಿತ್ರಕೃಪೆ - ಗೂಗಲೇಶ್ವರ 

ಶಾಲೆಯಲ್ಲಿ ಓದು ಸಾಗಿತ್ತು.. ಬೆಳೆದ ನಂತರ ಮುಂದಕ್ಕೆ ಓದಬೇಕು ಎಂಬ ಇಚ್ಛೆಯಿದ್ದರೂ, ಸರಸ್ವತಿ ಕೊಂಚ ನಾಚಿಕೊಂಡು ಲಕ್ಷ್ಮಿಗೆ ದಾರಿ ಮಾಡಿ ಕೊಟ್ಟಿದ್ದಳು, ಅಂದರೆ ಜೀವನೋಪಾಯಕ್ಕೆ ದುಡಿಯಬೇಕಿದ್ದರಿಂದ, ಹೊಲದಲ್ಲಿ ದುಡಿಯುವುದೇ  ಮುಖ್ಯವಾಗಿತ್ತು.. 

ಹೀಗೆ ಬೆಳೆದಂಗೆ.. ಇವರಿಬ್ಬರ ಮಧ್ಯೆ ವಯೋಸಹಜವಾದ ಆಕರ್ಷಣೆ ಬೆಳೆಯಿತು.. ಒಂದಾಗೋಕೆ ಏನೂ ಅಡ್ಡಿಯಿರಲಿಲ್ಲ.. ಒಂದು ದಿನ ಪರಮು ಹೊಲದಲ್ಲಿ ಕೆಲಸ ಮಾಡುತಿದ್ದಾಗ "ಪಾರು ಬಾರೆ ಇಲ್ಲಿ ಒಂದು ಚೂರು ಮಾತಾಡಬೇಕು" ಎಂದ 

"ಪರಮು ಹೊಲಕ್ಕೆ  ಬಿಡ್ತಾ ಇದ್ದೀನಿ.  ಊಟದ ಸಮಾಯವಾಗ್ತಾ ಇದೆ.. ಅಲ್ಲಿ ಮಾವಿನ ಮರದ ನೆರಳಿಗೆ ಹೋಗಿ ಕೂತ್ಕೊಂಡಿರು. .ನೀರು ಬಿಟ್ಟು ಬರ್ತೀನಿ.. ಊಟ ಮಾಡ್ತಾ ಮಾತಾಡೋಣ"

ಚಿತ್ರಕೃಪೆ - ಗೂಗಲೇಶ್ವರ 
'ಸರಿ ಕಣೆ" 

ಊಟದ ಸಮಯವಾಯಿತು.. ಪಾರು ನೆಡೆದುಕೊಂಡು ಬರುತ್ತಿದ್ದನ್ನು ಕಂಡು ಅವಳನ್ನೇ ದೃಷ್ಟಿಸಿ ನೋಡಿದ.. ಎಂದೂ ಆ ರೀತಿಯಲ್ಲಿ ನೋಡಿರಲಿಲ್ಲ .. ಇಂದೇಕೋ ವಿಶೇಷ ಅನಿಸಿತು.. 

ಹತ್ತಿರ ಬಂದ ಪಾರು ತನ್ನನ್ನೇ ನೋಡುತ್ತಿದ್ದ ಪರಮುವನ್ನು "ಏನು ಸಾಹೇಬರು ನೋಡ್ತಾನೆ ಇದ್ದೀರಾ ಏನು ಸಮಾಚಾರ"

ಅಷ್ಟೊತ್ತಿಗೆ ಪರಮು ಡಬ್ಬಿಯಲ್ಲಿ ತಾನು ಮಾಡಿದ್ದ ರಾಗಿ ಮುದ್ದೆಯನ್ನು ತೆಗೆದು ಇಬ್ಬರಿಗೂ ತಟ್ಟೆಯಲ್ಲಿ ಹಾಕಿ, ಅದಕ್ಕೆ ಪಾರು ಮಾಡಿದ್ದ ಅವರೆಕಾಳಿನ ಹುಳಿ ಹಾಕಿ, ಪಕ್ಕದಲ್ಲಿ ಒಂದು ಪುಟ್ಟ ಈರುಳ್ಳಿ, ಹಸಿರು ಮೆಣಸಿನ ಕಾಯಿ ಇಟ್ಟಿದ್ದ" 

ಚಿತ್ರಕೃಪೆ - ಗೂಗಲೇಶ್ವರ 

ದಿನವೂ ಹೀಗೆ ಮಾಡ್ತಾ ಇದ್ದರು, ಒಬ್ಬರು ಒಂದು ಅಡಿಗೆ ಮಾಡಿದರೆ ಅದಕ್ಕೆ ಪೂರಕವಾಗಿ ಇನ್ನೊಬ್ಬರು ಅಡಿಗೆ ಮಾಡಿಕೊಂಡು ಬರುತ್ತಿದ್ದರು.. ಉಳಿದದ್ದು ಅನ್ನುವ ಪ್ರಶ್ನೆಯೇ ಬರುತ್ತಿರಲಿಲ್ಲ.. ಯಾಕೆ ಅಂದರೆ ಎಷ್ಟು ಬೇಕೋ ಅಷ್ಟೇ ಮಾಡಿಕೊಂಡು ಬರುತ್ತಿದ್ದರು.. ರಾತ್ರಿಗೆ ಹೊಸ ಅಡಿಗೆ.. ಹೀಗೆ ಸಾಗುತಿತ್ತು ಅವರ ಬದುಕು.. 

ಮತ್ತೆ ಕತೆಗೆ ಮರಳಿದರೆ .. ಪಾರು ಕೇಳಿದ ಪ್ರಶ್ನೆ ಕೇಳಿ ಒಮ್ಮೆ ಮೈಜಾಡಿಸಿಕೊಂಡು.. "ಪಾರು.. ಪಾರು" 

"ಪರಮು ನನ್ನ ಹೆಸರು ಪಾರು ಅಂತ ಗೊತ್ತು ..ವಿಷಯ ಹೇಳು"

"ಪಾರು ಪಾರು ಪಾರು.. ನನ್ನ ಮದುವೆ ಆಗ್ತೀಯೇನೇ"

ಕೈಯಲ್ಲಿದ್ದ ತಟ್ಟೆಯನ್ನು ಮೆಲ್ಲಗೆ ಕೆಳಗೆ ಇಟ್ಟಳು.. ಪಾರು.. ಆಕಾಶ ನೋಡುತ್ತಾ ಕೆಲವು ಕಾಲ ಹಾಗೆ ಕೂತಳು!!!

ಪರಮು ಮನಸ್ಸಲ್ಲಿ "ಹೃದಯದಲಿ ಇದೇನಿದು ನದಿಯೊಂದು ಓಡಿದೆ" ಹಾಡು ಸಾಗುತಿತ್ತು!!!

ಮುಂದೆ....... 

Tuesday, November 21, 2023

PSLV-C57/Aditya-L1 - ಆದಿತ್ಯ ಕಶ್ಯಪ್

 ಪೇಪರ್ ಅಂತ ಕೂಗುತ್ತಾ ಟಪ್ ಅಂತ ಮನೆ ಮುಂದೆ ಸದ್ದಾಯಿತು.. 

ಮನೆ ಮುಂದೆ ರಂಗೋಲಿ ಹಾಕಲು ಮನೆ ಬಾಗಿಲು ತೆಗೆದು ಹೊರಗೆ ಬಂದರು.. ಬಗ್ಗಿ ಪೇಪರ್ ತೆಗೆದುಕೊಂಡು ಒಮ್ಮೆಲೇ ಹೆಡ್ ಲೈನ್ ನೋಡಿ.. ಹರುಷದಿಂದ ರೀ ಅಂತ ಕೂಗುತ್ತಾ ಒಳಗೆ ಬಂದರು.. 

ಆಗ ತಾನೇ ಸಂಧ್ಯಾವಂದನೆ ಮುಗಿಸಿದ್ದರು.. ಮಡದಿಯ ಕೂಗಿಗೆ ಏನು ಅಂತ ಕಣ್ಣಲ್ಲೇ ಪ್ರಶ್ನೆ ಕೇಳಿದರು.. 

PSLV-C57/Aditya-L1 Mission launched and it is safe in the orbit...am so happy....  

Bharath is really doing great...under Modi ji!

ಒಂದು ಕ್ಶಣ ಅವಕ್ಕಾದರು ಮಡದಿಯ ಇಂಗ್ಲಿಷ್ ಭಾಷೆ ಕೇಳಿ.. ಕೊಂಚ ಕ್ಷಣದಲ್ಲಿಯೇ ಅರಿವಾಯಿತು.. ಅಕ್ಟೋಬರ್ ೨೦೨೦ ರಲ್ಲಿ ಇಲ್ಲಿಗೆ ಬಂದ ಮೇಲೆ ಓದುವ ಹಂಬಲ ಜಾಸ್ತಿಯಾಗಿ ಸರಸ್ವತಿ ವಿದ್ಯಾಲಯದಲ್ಲಿ ಪದವಿ ಓದುತ್ತಿದ್ದಳು.. ಇದೆ ಅಕ್ಟೋಬರ್  ೨೦೨೩ ರಲ್ಲಿ ಅಂತಿಮ ಪರೀಕ್ಷೆ ಇದ್ದು.. ಯಾವುದೇ ವಿಷಯ ಬಾಕಿ ಉಳಿಸಿಕೊಳ್ಳದೆ ವಿಶಾಲಾಕ್ಷಿ ಬಿ ಎ  ಅಂತ ಬೋರ್ಡ್ ಕೂಡ ಬರೆಸಿಕೊಂಡು ಇಟ್ಟುಕೊಂಡಿದ್ದು ನೆನಪಾಯಿತು.. . ಇಂಗ್ಲೀಷಿನಲ್ಲಿ ನಿರರ್ಗಳವಾಗಿ ಮಾತಾಡುತ್ತಿದ್ದಳು . ದೇಶ, ಭಾಷೆ, ರಾಜಕೀಯ, ಕ್ರೀಡೆ, ಸಿನಿಮಾ ಎಲ್ಲವೂ ಕರತಲಾಮಲಕವಾಗಿತ್ತು..ಯಾವುದೇ ವಿಷಯ ಅವಳಿಗೆ ಎಟುಕುತ್ತಿತ್ತು..  ಪರೀಕ್ಷಾ ಕಾಲ.. ಪದವಿ ಪರೀಕ್ಷೆಗೆ ಬಿಟ್ಟು ಬೇರೆ ಯಾವುದೇ ವಿಷಯವನ್ನು ಗಮನಿಸುತ್ತಿರಲಿಲ್ಲ.. ಅಷ್ಟು ಉತ್ಸಾಹ ಓದಿನಲ್ಲಿ..  ಪರೀಕ್ಷೆ ಮುಗಿದಿತ್ತು.. ಹಾಗಾಗಿ ಹಿಂದಿನ ಮಾಸದ ದಿನಪತ್ರಿಕೆಗಳನ್ನು ಒಂದೊದಾಗಿ ಓದುತ್ತಿದ್ದಳು.. 

ಹೌದು ಕಣೆ.. ನಿಜಕ್ಕೂ ನಮ್ಮ ಭಾರತ ಪುಣ್ಯ ಮಾಡಿದೆ.. ಆದರೆ ನನ್ನ ದುರಾದೃಷ್ಟ ನಾನು ಮೋದಿಗೆ ಮತದಾನ ಮಾಡಲು ಆಗಲಿಲ್ಲ ನೀನೆ ಪುಣ್ಯವಂತೆ ೨೦೧೪ ಮತ್ತು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ಮುರುಳಿ ಕರೆದುಕೊಂಡು ಹೋಗಿ ಮತದಾನ ಮಾಡಿಸಿದ್ದ.. ಮೋದಿ ಗೆಲುವಲ್ಲಿ ನಿನ್ನ ಮತದ ಪಾತ್ರವೂ ಇದೆ ಎಂದು ಖುಷಿಯಾಗಿದೆ... 

ಹೌದು ಕಣ್ರೀ ನೀವು ಹೇಳೋದು ಸರಿ.. ಭಾರತ ನಿಜಕ್ಕೂ ಪುಣ್ಯ ಮಾಡಿದೆ.. ಮೋದಿಯಂತಹ ನಾಯಕತ್ವ ದೊರಕಿರುವುದು.. ನಿಮಗೆ ಇನ್ನೊಂದು ವಿಷಯ ಗೊತ್ತೇ.. ?

ಅಪ್ಪ ಮಾತಾಡುತ್ತಿದ್ದದ್ದು ಕಡಿಮೆ ಆದರೆ ಕಿವಿ ಮಂದವಾಗಿದ್ದರೂ ಎಲ್ಲವನ್ನೂ ಅರಿಯುತ್ತಿದ್ದರು.. ಎಲ್ಲಾ ವಿಚಾರಗಳೂ ಗೊತ್ತಾಗುತಿತ್ತು.. 

ಏನು ವಿಚಾರ.. 

ನೀವು ಕಳ್ಳರು ಎಲ್ಲವೂ ಗೊತ್ತಿದೆ ಸುಮ್ಮನೆ ಕತೆ ಬಿಡ್ತಾ ಇದ್ದೀರಾ.. ಕೃಷ್ಣವೇಣಿ ದಿನವೂ ದೇವರ ದೀಪ ಹಚ್ಚಿ ಪೂಜೆ ಮಾಡುವಾಗ ಅವಳ ಪ್ರಾರ್ಥನೆ ಕೇಳಿಸಿಕೊಂಡು ಆಶೀರ್ವಾದ ನೀಡಿದ್ದೀರಾ ಸುಮ್ಮನೆ ಕತೆ ಬಿಡ್ತೀರಾ.. ನೀವೇ ಹೇಳಿ.. 

ಇಲ್ಲ ಕಣೆ ನೀನು ಹೇಳು.. ಆ ಖುಷಿ ನಿನ್ನಿಂದಲೇ ಅರಿವಾಗಲಿ.. ನಿನ್ನ ನಗು ಮೊಗ ನೋಡುವುದು ಒಂದು ಖುಷಿ.. 

ರೀ ನಮ್ಮ ಮೊಮ್ಮಗ ಆದಿತ್ಯ ಹೆಚ್ಚಿನ ಓದಿಗಾಗಿ ಇಂಗ್ಲೆಂಡಿನ ಕಾರ್ಡಿಫ್ ಪ್ರದೇಶದ ಕಾಲೇಜಿಗೆ ಹೋಗಿದ್ದಾನೆ . ನನಗೊಂತು ಬಹಳ ಖುಷಿ.. ಇಂಗ್ಲೆಂಡಿನ ಲಂಡನ್ ಸಮೀಪ ಇರುವ ಊರಿನಲ್ಲಿ ಹೆಚ್ಚಿನ ವಿದ್ಯಾಭ್ಯಾಸ ಅವನ ಬದುಕಿಗೆ ಉತ್ತಮ ಅಡಿಪಾಯ ಹಾಕಿಕೊಡುವುದು.. ಕೃಷ್ಣವೇಣಿ ತನ್ನ ಬದುಕನ್ನೇ  ಮಗನಿಗೆ ಮುಡಿಪಾಗಿಟ್ಟಿದ್ದಾಳೆ... ಅದು ನಿಜಕ್ಕೂ ಸಾರ್ಥಕ ಕ್ಷಣ.. 

ಹೌದು ಕಣೆ.. ಪಾಪ ಆ ಮಗು ನಮ್ಮ ಮನೆಗೆ ತನ್ನ ಬದುಕನ್ನೇ ಮೀಸಲಿಟ್ಟಿದೆ.. ವಿಜಯ, ಶ್ರೀಕಾಂತ, ಮುರುಳಿ ಎಲ್ಲರ ವೃತ್ತಿ ಬದುಕಿನ ಆರಂಭಕ್ಕೆ ಅವಳೇ ಕಾರಣಕರ್ತೆ.. ಇಂದು ಎಲ್ಲರೂ ಬದುಕಿನಲ್ಲಿ ಒಂದು ಹಂತ ತಲುಪಿ ಗುರಿ ಸಾಧಿಸಿದ್ದಾರೆ ಎಂದರೆ ಅವಳ ಶ್ರಮ ಬಹಳ ಇದೆ.. 

ಹೌದು ಕಣ್ರೀ.. ಆದಿತ್ಯ ಕೂಡ ತುಂಟ ಹುಡುಗ. ಆದರೆ ವಿಮಾನ ನಿಲ್ದಾಣದಲ್ಲಿ ಬಹಳ ಜವಾಬ್ಧಾರಿಯಿಂದ ನೆಡೆದುಕೊಂಡ.. ತನ್ನ ಅಮ್ಮನನ್ನ ತಬ್ಬಿ ಹಿಡಿದು.. ಅಳಬಾರದು.. ಓದುತ್ತೇನೆ, ಬರುತ್ತೇನೆ... ಒಂದು ಕರೆ ಮಾಡು ಸಾಕು ಏನೇ ಸಮಸ್ಯೆ ಇದ್ದರೂ ನಾನಿದ್ದೇನೆ.. ಎಂದು ಹೇಳಿದಾಗ ನಿಜಕ್ಕೂ ಇಲ್ಲಿಂದ ನನಗೆ ಕಣ್ಣು ತುಂಬಿ ಬಂದಿತ್ತು.. ಕೃಷ್ಣವೇಣಿ ಅಳಲಿಲ್ಲ.. ಆದರೆ ಅವಳ ಕಣ್ಣಲ್ಲಿ ನೀರಿತ್ತು.. ಆದರೆ ಅದು ದುಃಖದ ಕಣ್ಣೀರಲ್ಲ ಬದಲಿಗೆ ಅವಳ ಜೀವನ ಪರಿಶ್ರಮದ ಬೆವರು ಕಣ್ಣುಗಳಲ್ಲಿ ಕಂಡಿತ್ತು. ಸಾಧಿಸಿದ ಮುಖಭಾವ.. ಸಾಧಿಸಿದ ಸಂತೃಪ್ತಿ ....!

ನಿಜಕ್ಕೂ ಅನುಗ್ರಹ ಸದನದ ಅನುಗ್ರಹಿತ ಕ್ಷಣಗಳು ಅಂದ್ರೆ ಇವೆ ಕಣೆ. 

ಪುಟ್ಟ ಮಗುವಾಗಿದ್ದಾಗ ಯಾರಾದರೂ ಎತ್ತಿಕೊಂಡರೆ ಅಮ್ಮನ ಹತ್ತಿರ ಹೋಗಬೇಕು ಎನ್ನುವುದನ್ನು ಮುದ್ದು ಮುದ್ದಾಗಿ ಅಮ್ಮತ್ತಾ ಅಮ್ಮತ್ತಾ ಎಂದು ತೊದಲು ಭಾಷೆಯಲ್ಲಿ ಹೇಳುತ್ತಿದ್ದ ಇಂದು ಅಮ್ಮನಿಂದ ಸಾವಿರಾರು ಮೈಲಿಗಳು ದೂರಕ್ಕೆ ಹೋಗಿ ಅಲ್ಲಿ ಓದಲು ಹೋಗಿದ್ದಾನೆ.. ಅವನೇ ಬಟ್ಟೆ ಒಗೆದುಕೊಂಡು, ಅಡಿಗೆ ಮಾಡಿಕೊಂಡು ಜವಾಬ್ಧಾರಿಯಿಂದ ನೆಡೆದುಕೊಳ್ಳುತ್ತಿದ್ದಾನೆ.. 

ಆದಿತ್ಯ ಮಗು.. ನಮ್ಮ ಮನೆಯಿಂದ ಓದಲು ವಿದೇಶಕ್ಕೆ ಹಾರಿದ್ದೀಯಾ.. ನಿನ್ನ ಗುರಿ ಮುಟ್ಟುವ ಹಾದಿಯಲ್ಲಿ ಯಾವುದೇ ಅಡೆತಡೆಗಳು ಬರಬಾರದು.. ಯಾವುದೇ ಅಡಚಣೆಗಳು ನಿನಗೆ ಅಡ್ಡಿಯಾಗಬಾರದು.. ನಿನ್ನ ಗಮನ ನಿನ್ನ ಅಮ್ಮನ ಗುರಿ ತಲುಪುವುದಷ್ಟೇ ಮುಖ್ಯವಾಗಿರಬೇಕು.. ಇನ್ಯಾವುದೇ ಅಡ್ಡಿ ಆತಂಕಗಳು ಬರಬಾರದು.. ಅದೇನೇ ಬಂದರೂ ನಿನ್ನ ಅಜ್ಜಿ ತಾತನನ್ನು ನೆನೆಸಿಕೋ.. ಆ ಕ್ಷಣದಲ್ಲಿ ಅದನ್ನು ದೂರ ಮಾಡುತ್ತೇವೆ.. 

ಹೌದು ಕಣ್ರೀ ಒಳ್ಳೆಯ ಮಾತು.. ಸೆಪ್ಟೆಂಬರ್ ಮಾಸದಲ್ಲಿ ಆದಿತ್ಯನ ಕಡೆ ಪ್ರಪಂಚವೇ ನೋಡುತ್ತಿತ್ತು.. 

ಒಂದು PSLV-C57/Aditya-L1 

ಇನ್ನೊಂದು ಆದಿತ್ಯ ಕಶ್ಯಪ್ 




ಆದಿತ್ಯ ಎಲ್ ೧ ಉಡಾವಣೆ .. ಪ್ರಪಂಚವೇ ನಮ್ಮ ಭಾರತದ ಕಡೆ ನೋಡುವಂತೆ ಮಾಡಿದೆ.. ಸೂರ್ಯನ ಹತ್ತಿರ ನಿಂತು ಸೂರ್ಯನ ವಲಯದಲ್ಲಿ ಆಗುವ ಬದಲಾವಣೆಗಳನ್ನು ನೋಡುವುದಕ್ಕೆ ಈ ಉಡಾವಣೆ ಉಪಯೋಗಕ್ಕೆ ಬರುತ್ತದೆ.. 

ಆದಿತ್ಯ ಕಶ್ಯಪ್ ಸಾಗರಗಳನ್ನು ದಾಟಿ ಲಂಡನ್ನಿಗೆ ಹೋಗಿದ್ದಾನೆ ..  ತಲುಪಿದ್ದಾನೆ.. ಬೆಳೆಯುತ್ತಿದ್ದಾನೆ. ಅವನ ಬೆಳೆವಣಿಗೆಯನ್ನು ಕೋರವಂಗಲ ಕುಟುಂಬ ಎದುರು ನೋಡುತ್ತಿದೆ.. 

ಎರಡೂ ಯೋಜನೆಗಳಿಗೆ ಯಶಸ್ಸಾಗಲಿ ಎಂದು ನಮ್ಮ ಶುಭಹಾರೈಕೆಗಳು.. 

ಶುಭವಾಗಲಿ ಮಗು ಹೋಗಿ ಬಾ.. ಜಯಶಾಲಿಯಾಗಿ ಹಿಂದಿರುಗು... ಅಮ್ಮನ ಆಶೀರ್ವಾದ ಸದಾ ಇದೆ. !!!

ಜೊತೆಗೆ ಜನುಮದಿನದ ಶುಭ ಹಾರೈಕೆಗಳು ನಿನಗೆ.. !

ಇಂತಿ ನಿನ್ನ ಅಜ್ಜಿ ತಾತಾ!!!